ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಸಮೀಪ ಯಡೂರು ಎಂಬುದೊಂದು ಊರಿದೆ. ಅದು ನನ್ನ ಭಾವ(ಅಕ್ಕನ ಗಂಡ)ನವರಾದ ಶ್ರೀ ಮುರಳೀಧರ ಜೋಯ್ಸ್ ಇವರ ಹುಟ್ಟೂರು. ಅಲ್ಲಿ ಅವರ ಅಣ್ಣಂದಿರು ಇದ್ದು, ಅವರಲ್ಲೊಬ್ಬರ ಮನೆಯ ಬಗ್ಗೆ ನಾನು ಹೇಳಲು ಹೊರಟಿದ್ದೇನೆ. ಆ ಮನೆಯನ್ನು ನನ್ನ ಭಾವನವರ ಅಜ್ಜನವರು ಕಟ್ಟಿಸಿದ್ದಾರೆ. ಮನೆಯನ್ನು ಕಟ್ಟಲು ೧೯೨೧ನೇ ಇಸವಿಯಲ್ಲಿ ಪ್ರಾರಂಭಿಸಿ ೧೯೨೪ನೇ ಇಸವಿಯಲ್ಲಿ ಗೃಹ ಪ್ರವೇಶ ಮಾಡಿರುವುದಾಗಿ ಮನೆಯಲ್ಲಿ ದಾಖಲಿಸಿದ್ದಾರೆ. ಈಗ ನನ್ನ ಭಾವನವರ ಅಣ್ಣನವರಾದ ಶ್ರೀ ವಿಶ್ವೇಶ್ವರ ಜೋಯ್ಸರು ಆ ಮನೆಯಲ್ಲಿದ್ದು, ಅವರಿಗೆ ೩ ವರ್ಷವಾಗಿದ್ದಾಗ ಮನೆ ನಿರ್ಮಾಣಗೊಂಡಿದ್ದಾಗಿ ಹೇಳುತ್ತಾರೆ. ಸುತ್ತಮುತ್ತ ಕಾಡು, ಗದ್ದೆ ತೋಟದ ಪ್ರಶಾಂತ ಪರಿಸರ, ಮನೆಯ ಒಳಗೆ ಯಾವುದೇ ಭಾಗಕ್ಕೆ ಹೋದರೂ ಎ.ಸಿ. ರೂಮಿನಲ್ಲಿದ್ದ ಅನುಭವ. 
ಉಪ್ಪರಿಗೆಗೆ ಹೋಗಲು ಎರಡು ಕಡೆ ಮೆಟ್ಟಿಲುಗಳು ಒಂದು ಕಡೆ ಕಲ್ಲಿನದ್ದು, ಇನ್ನೊಂದೆಡೆ ಮರದ ಮೆಟ್ಟಿಲುಗಳು. ಮೇಲೆ ಕೂಡಾ ವಿಶಾಲವಾದ ಜಾಗವಿದ್ದು ಅಲ್ಲಿಂದ ಕೂಡಾ ಕೆಳಗೆ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿರುವಂತಿದೆ.
ಮನೆಯಲ್ಲಿ ಒಂದು ಹಳೆಯ ತಿಜೋರಿ ಇದ್ದು, ಅದರಲ್ಲಿ ಹಣ, ಮುಖ್ಯವಾದ ಕಾಗದಪತ್ರಗಳನ್ನು ಇಡಲಾಗುತ್ತಿತ್ತು. ಪ್ರತಿವರ್ಷ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆ ಸಂದರ್ಭದಲ್ಲಿ ಉಪಯೋಗಿಸುವ ದೇವರ ಒಡವೆಗಳನ್ನು ಮನೆಯಲ್ಲಿರುವ ನೆಲಮಾಳಿಗೆಯಲ್ಲಿ ಇಡಲಾಗುತ್ತದೆ. ಒಟ್ಟಿನಲ್ಲಿ ಆ ಮನೆ ಒಂದು ರೀತಿಯಲ್ಲಿ ಸಣ್ಣ ಅರಮನೆಯಂತಿದೆ.
ಈಗ ಸದರಿ ಮನೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಇನ್ನು ಕೆಲವೇ ದಿನಗಳಲ್ಲಿ ನೆಲಸಮ ಮಾಡಲಾಗುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಿ ಅಂತಹ ಮನೆಯನ್ನು ನೋಡಲು ಸಿಗುವುದು ಕಷ್ಟ. ಆದ್ದರಿಂದ ನಿನ್ನೆ ನಾನು, ನನ್ನ ಪತ್ನಿ, ತಂದೆ, ತಾಯಿ, ಅಕ್ಕ, ಭಾವ ಎಲ್ಲರೂ ಹೋಗಿ ಕೊನೆಯ ಬಾರಿ ನೋಡಿಕೊಂಡು ಬಂದೆ. ಹಾಗೆಯೇ ಹುಲಿಕಲ್ಲು ಘಾಟಿಯಲ್ಲಿರುವ ಚಂಡಿಕಾ ಪರಮೇಶ್ವರಿ ದೇವಿ ಹಾಗೂ ಸಮೀಪ ಇರುವ ಉದ್ಭವ ಗಣಪತಿಯನ್ನು ನೋಡಿ ಬಂದೆವು. ಇನ್ನು ಈ ಮನೆ ಇತಿಹಾಸ ಎಂಬುದು ಬೇಸರದ ಸಂಗತಿ. ಮನೆಯನ್ನು ನೋಡಿಕೊಂಡು ಬರುವಾಗ ಹಾಗೆಯೇ ಕುಪ್ಪಳ್ಳಿಗೆ ಹೋಗಿ ಕುವೆಂಪುರವರ ಮನೆ ನೋಡಿ ಬಂದೆವು.